Wednesday, August 28, 2024

ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

 ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆ. 29ಕ್ಕೆ ಬೆಂಗಳೂರಿನಲ್ಲಿ ಉಪನ್ಯಾಸ ಮಾಲಿಕೆ

ಬೆಂಗಳೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳನ್ನು ತನ್ನ ʼಭುವನʼದಂತಹ ವೇದಿಕೆಯ ಜೊತೆಗೆ ಸಂಯೋಜಿಸುವ ಸಾಧ್ಯತೆ ಬಗ್ಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ – ಇಸ್ರೋ  ಆಸಕ್ತಿ ತಾಳಿದ್ದು, ಈ ಬಗ್ಗೆ ಚರ್ಚಿಸಲು ಉಪನ್ಯಾಸ ಮಾಲಿಕೆಯೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ.

ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ- ನಿಯಾಸ್‌ (ಎನ್‌ ಐ ಎಎಸ್) ಮತ್ತು ಹ್ಯಾನ್ಸ್‌ ಸೀಡೆಲ್‌ ಫೌಂಡೇಷನ್‌ ಜಂಟಿಯಾಗಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ನಿಯಾಸ್‌ ಸಭಾಂಗಣದಲ್ಲಿ  ಆಗಸ್ಟ್‌ 29ರ ಗುರುವಾರ  ಬೆಳಗ್ಗೆ 10 ಗಂಟೆಗೆ ‘ಸ್ಥಳೀಯ ಆಡಳಿತದ ಬಲವರ್ಧನೆ-ತಂತ್ರಜ್ಞಾನ ಮೂಲಕ ಅಂತರ ನಿವಾರಣೆʼ ಉಪನ್ಯಾಸ ಕಾರ್ಯಕ್ರಮವನ್ನು ಸಂಘಟಿಸಿವೆ.

ಕಾರ್ಯಕ್ರಮದಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ.ಶಂಕರ ಕೆ. ಪ್ರಸಾದ್‌, ನಿಯಾಸ್‌ನಲ್ಲಿ ʼಇಸ್ರೋ ಚೇರ್‌ ಪ್ರೊಫೆಸರ್‌ ಆಗಿರುವ ಡಾ. ಪಿ.ಜಿ. ದಿವಾಕರ್‌ ಮತ್ತು ನಿಯಾಸ್‌ನಲ್ಲಿ ಸಂಘರ್ಷ ಪರಿಹಾರ  ಮತ್ತು ಶಾಂತಿ ಸಂಶೋಧನಾ ಕಾರ್ಯಕ್ರಮದ ಸಹಾಯಕ ಪ್ರಾಧ್ಯಾಪಕ ಡಾ. ಅಂಶುಮಾನ್‌ ಬೆಹೆರಾ ಪಾಲ್ಗೊಳ್ಳಲಿದ್ದಾರೆ.

ಡಾ. ಶಂಕರ ಪ್ರಸಾದ್‌ ಅವರು ಬ್ಲಾಕ್‌ ಚೈನ್‌, ಇಂಡಿಯಾ ಸ್ಟಾಕ್‌ ಮತ್ತು ಧ್ವನಿ ಸಂವಹನದೊಂದಿಗೆ ಇ-ಆಡಳಿತವನ್ನು ಸಂಯೋಜಿಸುವ ಬಗ್ಗೆ, ಡಾ. ಪಿ. ದಿವಾಕರ್‌ ಅವರು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನಾ ಯೋಜನೆ, ಭೂ ವೀಕ್ಷಣಾ ಉಪಗ್ರಹಗಳು ಮತ್ತು ಜಿಯೋ ಸ್ಪೇಷಿಯಲ್‌ ಟೆಕ್ನಾಲಜಿಗಳ ಮೂಲಕ ಡೇಟಾ ಪ್ರಕ್ರಿಯೆ ಮತ್ತು ಡಾ. ಆಂಶುಮಾನ್‌ ಬೆಹೆರಾ ಭಾರತದಲ್ಲಿ ರಾಜಕೀಯ ಹಿಂಸೆ ಮತ್ತು ಆಂತರಿಕ ಸಂಘರ್ಷಗಳು, ರಾಜಕೀಯ ಸಿದ್ಧಾಂತ ಹಾಗೂ ಅಭಿವೃದ್ಧಿಯ ಸಾಮಾಜಿಕ ಪರಿಣಾಮಗಳ ಬಗ್ಗೆ ಚರ್ಚಿಸುವರು.

ಆಡಳಿತವನ್ನು ವಿಕೇಂದ್ರೀಕರಿಸಲು ಮತ್ತು ಅಂತರ್ಗತ ನಿರ್ಧಾರ ಕೈಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ತಳಮಟ್ಟದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಗುರಿಯನ್ನು 73 ನೇ ತಿದ್ದುಪಡಿ ಕಾಯಿದೆ (1992)  ಹೊಂದಿದೆ. ಆದರೆ ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ಅರಿವಿನ ಕೊರತೆಯಿಂದಾಗಿ ಅದರ ಯಶಸ್ಸು ಹೆಚ್ಚಾಗಿ ಸೀಮಿತವಾಗಿದೆ.

ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಜನ ಸಾಮಾನ್ಯರು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿನ ಅರಿವಿನ ಕೊರತೆಯ ಅಂತರದಿಂದಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ಹೊಂದಿರುವುದಿಲ್ಲ. ಇಂತಹ ಸವಾಲುಗಳನ್ನು ಗೆಲ್ಲಲು ತಂತ್ರಜ್ಞಾನ ಚಾಲಿತ ಉಪಕ್ರಮಗಳು ನೆರವಾಗುತ್ತವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಭುವನ್‌ನಂತಹ ಜ್ಞಾನ ವೇದಿಕೆಯು ತಳಮಟ್ಟದಲ್ಲಿ ಉತ್ತಮ ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯನ್ನು ಬೆಂಬಲಿಸಲು ಬೇಕಾದ ಅಮೂಲ್ಯವಾದ ಭೌಗೋಳಿಕ ಮಾಹಿತಿ ಒದಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳನ್ನು ಈ ವೇದಿಕೆಯ ಜೊತೆಗೆ ಸಂಯೋಜಿಸುವ ಮೂಲಕ ಪಂಚಾಯಿತ್‌ ರಾಜ್‌ ಸಂಸ್ಥೆಗಳು ಸ್ಥಳೀಯ ಆಡಳಿತವನ್ನು ಬಲಪಡಿಸಬಹುದು. ಈ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆಯು ಆಡಳಿತದ ಅಂತರ ನಿವಾರಣೆ ಮತ್ತು ಅದಕ್ಕಾಗಿ ತಾಂತ್ರಿಕ ಪರಿಹಾರಗಳನ್ನು ಸಂಯೋಜಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ ಎಂದು ನಿಯಾಸ್‌ ಪ್ರಜಾತಂತ್ರ ವೇದಿಕೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Click the image to see closer view:


No comments:

Advertisement