Showing posts with label Sea Plane. Show all posts
Showing posts with label Sea Plane. Show all posts

Saturday, October 31, 2020

ಭಾರತದ ಚೊಚ್ಚಲ ಸೀಪ್ಲೇನ್ ಗುಜರಾತಿನಲ್ಲಿ ಹಾರಿತು.!

 ಭಾರತದ ಚೊಚ್ಚಲ ಸೀಪ್ಲೇನ್ ಗುಜರಾತಿನಲ್ಲಿ ಹಾರಿತು.!

ಸ್ವತಃ ಸವಾರಿ ಮೂಲಕ ಪ್ರಧಾನಿ ಮೋದಿ ಚಾಲನೆ

ಅಹಮದಾಬಾದ್: ನರ್ಮದಾ ನದಿಯ ಏಕತಾ ಪ್ರತಿಮೆ ಇರುವ ಕೇವಡಿಯಾದಿಂದ ಅಹಮದಾಬಾದಿನ ಸಬರಮತಿ ನದಿ ಮುಂಭಾಗದವರೆಗೆ ಭಾರತದ ಮೊತ್ತ ಮೊದಲ ಸೀಪ್ಲೇನ್ ಸೇವೆಯ ಚೊಚ್ಚಲ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಸವಾರಿ ಮಾಡುವ ಮೂಲಕ 2020 ಅಕ್ಟೋಬರ್ 31ರ ಶನಿವಾರ ಚಾಲನೆ ನೀಡಿದರು.

ಹಾರಾಟವನ್ನು ಸ್ಪೈಸ್ಜೆಟ್ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಸ್ಪೈಸ್ ಷಟಲ್ ನಿರ್ವಹಿಸುತ್ತದೆ.

ಸೀ ಪ್ಲೇನ್ ಅಥವಾ ಸಮುದ್ರ ವಿಮಾನ ಎಂದರೆ ರೆಕ್ಕೆ ಜೋಡಿಸಲ್ಪಟ್ಟಿರುವ ಆಗಸದಲ್ಲಿ ಹಾರುವುದರ ಜೊತೆಗೆ ನೀರಿನಲ್ಲಿ ಇಳಿಯುವ ಸಾಮರ್ಥ್ಯವಿರುವ ವಿಶಿಷ್ಟ ವಿಮಾನ.

ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ಸಿಎಸ್) - ಉಡಾನ್ ಅಡಿಯಲ್ಲಿ ಪ್ರಾರಂಭಿಸಲಾದ ಸೀಪ್ಲೇನ್ ಸೇವೆಯು ಕೊನೆಯ ಮೈಲಿನವರೆಗೆ ಜನರಿಗೆ ಸಂಪರ್ಕವನ್ನು ಕಲ್ಪಿಸುವುದರಿಂದ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಅಹಮದಾಬಾದಿನಲ್ಲಿ ಇಳಿದ ಕೂಡಲೇ ಪ್ರಧಾನಿ ಮೋದಿ ಅವರು ಸಬರಮತಿ ನದಿಯ ಮುಂಭಾಗದಲ್ಲಿ ವಾಟರ್ ಡ್ರೋಮ್ನ್ನು ಉದ್ಘಾಟಿಸಿದರು, ನಂತರ ಅವರು ಅಹಮದಾಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ (ಎಸ್ವಿಪಿಐ) ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು.

ಸ್ಪೈಸ್ ಜೆಟ್ ಅಹಮದಾಬಾದ್-ಕೇವಡಿಯಾ ಮಾರ್ಗದಲ್ಲಿ ಅಕ್ಟೋಬರ್ ೩೧ ರಿಂದ ಪ್ರತಿದಿನ ಎರಡು ವಿಮಾನಗಳನ್ನು ನಿರ್ವಹಿಸಲಿದೆ

ಕೇವಡಿಯಾದಿಂದ ಅಹ್ಮದಾಬಾದ್ ತಲುಪಲು ಪ್ರಧಾನ ಮಂತ್ರಿಯವರು ೫೦ ನಿಮಿಷಗಳ ಕಾಲವನ್ನು ಸೀಪ್ಲೇನ್ ಸವಾರಿಗೆ ತೆಗೆದುಕೊಂಡರು. ಸೇವೆಯು ಈಗ ನವೆಂಬರ್ ೧ರ ಭಾನುವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಸಮುದ್ರ ವಿಮಾನ ಸವಾರಿಗಾಗಿ ಈಗಾಗಲೇ ಆನ್ಲೈನ್ನಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ ಮತ್ತು ವೆಬ್ಸೈಟ್ನಲ್ಲಿಯೂ ಬುಕ್ಕಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ.

ಆದರೆ, ಪ್ರಯಾಣಿಕರಿಗೆ ದೃಢಪಡಿಸಿದ ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕೇವಡಿಯಾದ ಏಕತಾ ಪ್ರತಿಮೆ ಇರುವ ತಾಣದಿಂದ ಸಮುದ್ರ ವಿಮಾನ ಸವಾರಿಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯಂದು ಏಕ್ ಭಾರತ್ ಶ್ರೇಷ್ಠ ಭಾರತ್ ಆಚರಣೆಯ ಅಂಗವಾಗಿ ನೆರವೇರಿಸಿದರು.

ಪ್ರಧಾನಮಂತ್ರಿಯವರ ಭದ್ರತೆಗಾಗಿ ನಗರದ ಪೂರ್ವ ಮತ್ತು ಪಶ್ಚಿಮ ದಂಡೆಯ ಸಬರಮತಿ ರಿವರ್ಫ್ರಂಟ್ ರಸ್ತೆಗೆ ಭದ್ರ ಕಾವಲು ಹಾಕಿ ಪ್ರದೇಶವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿತ್ತು. ಮೋದಿಯವರು ಶುಕ್ರವಾರ ಬೆಳಗ್ಗೆ ಗುಜರಾತ್ ತಲುಪಿದರು. ನಂತರ ಅವರು ವಾರದ ಆರಂಭದಲ್ಲಿ ನಿಧನರಾದ ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಮತ್ತು ಜನಪ್ರಿಯ ಗುಜರಾತಿ ನಟ ಮತ್ತು ಸಂಗೀತಗಾರ ನರೇಶ್ ಕನೋಡಿಯಾ ಹಾಗೂ ಮಹೇಶ್ ಕನೋಡಿಯಾ ಅವರಿಗೆ ಗೌರವ ಸಲ್ಲಿಸಿದರು.

 ಭಾರತದ ಚೊಚ್ಚಲ ಸೀ ಪ್ಲೇನ್ ಸೇವೆಯ ವೈಶಿಷ್ಟ್ಯ

* ಮಾದರಿಯ ಮೊದಲ ಸೇವೆಯಲ್ಲಿ, ೧೯ ಆಸನಗಳ ಸಮುದ್ರ ವಿಮಾನವನ್ನು (ಸೀಪ್ಲೇನ್) ಸಬರಮತಿ ನದಿಯ ಮುಂಭಾಗ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ (ಸ್ಟಾಚ್ಯೂ ಆಫ್ ಯೂನಿಟಿ) ನಡುವಣ ವಿಮಾನಗಳಿಗಾಗಿ ಬಳಸಲಾಗುತ್ತದೆ. ಸೀಪ್ಲೇನ್ ಮಾಲ್ದೀವ್ಸ್ ನಿಂದ ಬಂದಿದೆ.

* ಸ್ಪೈಸ್ಜೆಟ್ನಿಂದ ಗುತ್ತಿಗೆ ಪಡೆದಿರುವ ಟ್ವಿನ್ ಒಟ್ಟರ್ ೩೦೦ ಸೀಪ್ಲೇನ್ನಲ್ಲಿ ೧೨ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು.

* ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಸೇವೆಗಳಿಗೆ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ನೀಡಲಾಗುವುದು. ಗುಜರಾತ್ ಸರ್ಕಾರ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡುವಿನ ತ್ರಿಪಕ್ಷೀಯ ಒಪ್ಪಂದದ ಪ್ರಕಾರ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

* ಅಹಮದಾಬಾದಿನ ಸಬರಮತಿ ನದಿಯ ಮುಂಭಾಗ ಮತ್ತು ಕೇವಡಿಯಾದಲ್ಲಿನ ಏಕತಾ ಪ್ರತಿಮೆ ನಡುವಣ ಪ್ರಯಾಣದ ಸಮಯವನ್ನು ಸೀಪ್ಲೇನ್ ಕಡಿತಗೊಳಿಸುತ್ತದೆ. ಕೇವಡಿಯಾದ ಏಕತಾ ಪ್ರತಿಮೆಯು ವಡೋದರಾದಿಂದ ಸುಮಾರು ೯೦ ಕಿ.ಮೀ, ಸೂರತ್ನಿಂದ ೧೫೦ ಕಿ.ಮೀ ಮತ್ತು ಅಹಮದಾಬಾದಿನಿಂದ ೨೦೦ ಕಿ.ಮೀ ದೂರದಲ್ಲಿದೆ.

*. ಅಹಮದಾಬಾದಿನಿಂದ ಕೇವಡಿಯಾ ನಡುವೆ ೨೦೦ ಕಿ.ಮೀ ದೂರ ಸಾಮಾನ್ಯವಾಗಿ ರಸ್ತೆ ಮೂಲಕ ಪಯಣಕ್ಕೆ ನಾಲ್ಕು ಗಂಟೆ ಬೇಕಾಗುತ್ತದೆ. ಆದರೆ ಈಗ ಸೀಪ್ಲೇನ್ ತನ್ನ ಗಮ್ಯಸ್ಥಾನವನ್ನು ತಲುಪಲು ಕೇವಲ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.

* ಸ್ಪೈಸ್ ಜೆಟ್ ಒಂದು ದಿನದಲ್ಲಿ ನಾಲ್ಕು ಸುತ್ತಿನ ಸೀಪ್ಲೇನ್ ಪಯಣವನ್ನು ನಡೆಸುತ್ತದೆ, ಅಂದರೆ, ಅಹಮದಾಬಾದ್ ಮತ್ತು ಕೇವಡಿಯಾ ನಡುವೆ ಎಂಟು ವಿಮಾನಗಳು ಸಂಚರಿಸುತ್ತವೆ.

* ಒಂದು ಸೀಪ್ಲೇನ್ ಟಿಕೆಟ್ ಟಿಕೆಟ್ ಬೆಲೆ ೧೫೦೦ ರೂ.ಗಳಷ್ಟು ಕಡಿಮೆ ಎಂದು ನಿರೀಕ್ಷಿಸಲಾಗಿದೆ.

ಪಾಕ್ ಸಚಿವರ ಪುಲ್ವಾಮಾ ಒಪ್ಪಿಗೆ ‘ಪ್ರಶ್ನಿಸಿದವರನ್ನು’ ಬಯಲುಮಾಡಿದೆ: ಪ್ರಧಾನಿ

 ಪಾಕ್ ಸಚಿವರ ಪುಲ್ವಾಮಾ ಒಪ್ಪಿಗೆ ‘ಪ್ರಶ್ನಿಸಿದವರನ್ನು’ ಬಯಲುಮಾಡಿದೆ: ಪ್ರಧಾನಿ

ಕೇವಡಿಯಾ (ಗುಜರಾತ್):  ೨೦೧೯ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಇಸ್ಲಾಮಾಬಾದಿನ ಪಾತ್ರದ ಬಗ್ಗೆ ಪಾಕಿಸ್ತಾನದ ಸಚಿವರ ಒಪ್ಪಿಕೊಂಡಿರುವುದು ನಮ್ಮ ಹುತಾತ್ಮರ ತ್ಯಾಗವನ್ನು ಪ್ರಶ್ನಿಸಿದವರನ್ನು ಅನಾವರಣಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 31ರ ಶನಿವಾರ ಹೇಳಿದರು.

ಗುಜರಾತಿನ ಕೇವಡಿಯಾದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮಾತನಾಡಿದ ಮೋದಿ, ಪುಲ್ವಾಮಾ ದಾಳಿಯ ನಂತರ ಪ್ರತಿಪಕ್ಷಗಳು ಮಾಡಿದ ಅಸಹ್ಯಕರ ಟೀಕೆಗಳು ಮತ್ತು ಆರೋಪಗಳನ್ನು ದೇಶವು ಮರೆಯುವುದಿಲ್ಲ ಎಂದು ನುಡಿದರು.

ಪುಲ್ವಾಮಾ ದಾಳಿಯ ಬಗ್ಗೆ ನೆರೆಯ ದೇಶದ ಅಂಗೀಕಾರವು ಪುಲ್ವಾಮಾ ಹುತಾತ್ಮರ ತ್ಯಾಗವನ್ನು ಪ್ರಶ್ನಿಸಿದ ಜನರನ್ನು ಬಯಲುಮಾಡಿದೆ. ನಾನು ಆರೋಪಗಳನ್ನು ಸಹಿಸಿಕೊಂಡಿದ್ದೇನೆ ಆದರೆ ಪ್ರಾಣನ್ನೇ ಅರ್ಪಿಸಿದ ನನ್ನ ಕೆಚ್ಚೆದೆಯ ಸೈನಿಕರಿಗಾದ ಅಪಮಾನ ನನ್ನ ಹೃದಯದಲ್ಲಿ ಆಳವಾದ ಗಾಯವನ್ನು ಮಾಡಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ, ನಮ್ಮ ಭದ್ರತಾ ಪಡೆಗಳ ಸ್ಥೈರ್ಯಕ್ಕಾಗಿ, ದಯವಿಟ್ಟು ಅಂತಹ ರಾಜಕೀಯವನ್ನು ಮಾಡಬೇಡಿ ಎಂದು ನಾನು ಇಂತಹ ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತೇನೆಎಂದು ಪ್ರಧಾನಿ ಹೇಳಿದರು.

೨೦೧೯ರ ಫೆಬ್ರವರಿ ೧೪ ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ೪೦ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ "ಫಿತೂರಿ ಸಿದ್ಧಾಂತಗಳನ್ನು ಮುಂದಿಟ್ಟ ಕಾಂಗ್ರೆಸ್ ಪಕ್ಷವು ಇದಕ್ಕಾಗಿ ಕ್ಷಮೆ ಯಾಚಿಸಬೇಕು ಎಂಬುದಾಗಿ ಬಿಜೆಪಿ ಆಗ್ರಹಿಸಿದ ಒಂದು ದಿನದ ಬಳಿಕ ಪ್ರಧಾನ ಮಂತ್ರಿಯವರ ಹೇಳಿಕೆ ಹೊರಬಿದ್ದಿದೆ.

ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದ ಪುಲ್ವಾಮಾ ದಾಳಿಗೆ ಇಸ್ಲಾಮಾಬಾದ್ ಕಾರಣ ಎಂಬುದಾಗಿ ಪಾಕಿಸ್ತಾನದ ಹಿರಿಯ ಸಚಿವ ಫವಾದ್ ಚೌಧರಿ ದೇಶದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಪ್ಪಿಕೊಂಡಿದ್ದರು. ನಂತರ ತಮ್ಮನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ತಾವು ಹೇಳಿದ್ದು ಪಾಕಿಸ್ತಾನದ "ಪುಲ್ವಾಮಾ ನಂತರದ ಕ್ರಮವನ್ನು ಎಂದು ಚೌದರಿ ಸಮಜಾಯಿಷಿ ನೀಡಿದ್ದರು.

ಪ್ರಧಾನಿಯವರು ಶನಿವಾರ ತಮ್ಮ ಭಾಷಣದಲ್ಲಿ, ಫ್ರಾನ್ಸಿನ ನೈಸ್ ನಗರದ ಇಗರ್ಜಿಯಲ್ಲಿ (ಚರ್ಚ್) ನಡೆದ ದಾಳಿ ಹಾಗೂ ಇಸ್ಲಾಮೋಫೋಬಿಯಾ ಮತ್ತು ವಾಕ್ ಸ್ವಾತಂತ್ರ್ಯದ ಬಗ್ಗೆ ಫ್ರಾನ್ಸ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳ ನಡುವಣ ವಾಗ್ಯುದ್ಧದ ಬಗ್ಗೆಯೂ ಮೋದಿ ಸ್ಪಷ್ಟವಾಗಿ ಉಲ್ಲೇಖಿಸಿದರು.

"ಎಲ್ಲ್ಲ ದೇಶಗಳು, ಸರ್ಕಾರಗಳು ಮತ್ತು ಧರ್ಮಗಳು ಭಯೋತ್ಪಾದನೆಯ ವಿರುದ್ಧ ಒಂದಾಗಬೇಕು ಎಂದು  ಒತ್ತಾಯಿಸಿದ ಮೋದಿ, "ಶಾಂತಿ, ಸಹೋದರತ್ವ ಮತ್ತು ಪರಸ್ಪರ ಗೌರವದ ಅರ್ಥವು ಮಾನವೀಯತೆಯ ನಿಜವಾದ ಗುರುತು. ಭಯೋತ್ಪಾದನೆಯಿಂದ ಯಾರೂ ಕಲ್ಯಾಣ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅವರು ನುಡಿದರು.

 ಯುವ ಸರ್ಕಾರಿ ನೌಕರರಿಗೆ ಕಿವಿಮಾತು

ಕನಿಷ್ಠ ಸರ್ಕಾg ಮತ್ತು ಗರಿಷ್ಠ ಆಡಳಿತ ನಿಮ್ಮ ಮಂತ್ರವಾಗಿರಬೇಕು ಎಂದು ಸರ್ಕಾರದ ನಾಗರಿಕ ಸೇವೆಯ ಯುವ ನೌಕರರಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ ಎಂಬುದು ಸರ್ಕಾರಿ ನೌಕರರ ಮಂತ್ರವಾಗಬೇಕು. ದೇಶದ ಉಕ್ಕಿನ ಚೌಕಟ್ಟಿನಂತೆ ಕಾರ್ ನಿರ್ವಹಿಸುವಾಗ ಭಾರತದ ಏಕತೆಗೆ ಪೂರಕವಾಗುವಂತಹ ಸಾಂವಿಧಾನಿಕ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ನುಡಿದರು.

ಎತ್ತರದಲ್ಲಿ ಕುಳಿತುಕೊಂಡು ಆಡಳಿತ ನಡೆಸುವುದಲ್ಲ, ಜನರಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸಿಕೊಳ್ಳುವುದು ಮುಖ್ಯ ಎಂದು ಪ್ರಧಾನಿ ಹೇಳಿದರು.

ಜನರು ಕೇವಲ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸ್ವೀಕರಿಸುವವರಲ್ಲ, ಅವರು ಜನತಾ ಜನಾರ್ದನ- ನಿಜವಾದ ಪ್ರೇರಕ ಶಕ್ತಿ ಎಂದು ಮೋದಿ ಹೇಳಿದರು.

"ಅದಕ್ಕಾಗಿಯೇ ನಾವು ಸರ್ಕಾg ಬದಲಿಗೆ ಆಡಳಿತಕ್ಕೆ ಹೋಗಬೇಕಾಗಿದೆ ಎಂದು ಕೇವಯಾದಿಂದ ಮಾಡಿದ ವರ್ಚುವಲ್ ಭಾಷಣದಲ್ಲಿ ಅವರು ಹೇಳಿದರು.

"ದೇಶದ ಇಂದಿನ ಸನ್ನಿವೇಶದಲ್ಲಿ ನಿಮ್ಮೆಲ್ಲರ (ಅಧಿಕಾರಿಗಳ) ಪಾತ್ರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಆಗಬೇಕು. ನಾಗರಿಕರ ಜೀವನದಲ್ಲಿ ನಿಮ್ಮ ಹಸ್ತಕ್ಷೇಪ ಕನಿಷ್ಠವಾಗಿದೆ ಮತ್ತು ಅದು ಜನ ಸಾಮಾನ್ಯರನ್ನು ಹೇಗೆ ಸಬಲಗೊಳಿಸುತ್ತದೆ ಎಂಬುದರತ್ತ ಗಮನ ಇರಬೇಕು ಎಂದು ಪ್ರಧಾನಿ ನುಡಿದರು.

ದೇಶದ ನಾಗರಿಕ ಸೇವೆಗಳಿಗೆ ಸ್ಟೀಲ್ ಫ್ರೇಮ್ (ಉಕ್ಕಿನ ಚೌಕಟ್ಟು) ಪದವನ್ನು ಮೊತ್ತ ಮೊದಲಿಗೆ ಬಳಸಿದ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆಯೂ ಪ್ರಧಾನಿ ಮಾತನಾಡಿದರು, ದೇಶದ ನಾಗರಿಕರಿಗೆ ಸೇವೆ ನೀಡುವುದು ನಿಮ್ಮ ಅತ್ಯುನ್ನತ ಕರ್ತವ್ಯ ಎಂಬ ಸಲಹೆಯನ್ನು ಸರ್ದಾರ್ ಸಾಹೇಬ್ ಅವರು ಅಧಿಕಾರಿಗಳಿಗೆ ನೀಡಿದ್ದಾರೆ. ನಾಗರಿಕ ಸೇವಾ ಸಿಬ್ಬಂದಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ರಾಷ್ಟ್ರೀಯ ಹಿತಕ್ಕೆ ಅನುಗುಣವಾಗಿರಬೇಕು, ದೇಶದ ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಬೇಕು ಎಂದು ಎಂದು ಪ್ರಧಾನಿ ಒತ್ತಿ ನುಡಿದರು.

"ನೀವು ನಿರ್ವಹಿಸುವ ನಿಮ್ಮ ಪ್ರದೇಶ ಮತ್ತು ವಿಭಾಗವು ಚಿಕ್ಕದಾಗಿದ್ದರೂ, ನೀವು ಯಾವಾಗಲೂ ಜನರ ಆಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ರಾಷ್ಟ್ರೀಯ ದೃಷ್ಟಿಕೋನ ಇರಬೇಕು ಎಂದು ಅವರು ಹೇಳಿದರು.

ಉಕ್ಕಿನ ಚೌಕಟ್ಟಿನ ಕೆಲಸ ಕೇವಲ ಆಧಾರ ಒದಗಿಸುವುದು ಮತ್ತು ಹಾಲಿ ವ್ಯವಸ್ಥೆಗಳನ್ನು ನಿರ್ವಹಿಸುವುದು ಮಾತ್ರವೇ ಅಲ್ಲ.  ಉಕ್ಕಿನ ಚೌಕಟ್ಟಿನ ಕೆಲಸವು ದೇಶಕ್ಕೆ ಒಂದು ದೊಡ್ಡ ಬಿಕ್ಕಟ್ಟು ಅಥವಾ ದೊಡ್ಡ ಬದಲಾವಣೆಯಿದ್ದರೂ ಸಹ, ದೇಶವನ್ನು ಒಂದು ಶಕ್ತಿಯಾಗಿ ಮಾರ್ಪಡಿಸುವ ಮೂಲಕ ಸಹಕರಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ (ಎಲ್ಬಿಎಸ್ಎನ್ಎಎ) ಪ್ರಸ್ತುತ ಫೌಂಡೇಶನ್ ಕೋರ್ಸ್ ಮಾಡುತ್ತಿರುವ ವಿವಿಧ ನಾಗರಿಕ ಸೇವೆಗಳಿಗೆ ಸೇರಿದ ಅಧಿಕಾರಿಗಳನ್ನು ಒಟ್ಟು ಸೇರಿಸುವ ಆರಂಭ್ ೨೦೨೦ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡುತ್ತಿದ್ದರು.

ಎಲ್ಬಿಎಸ್ಎನ್ಎಎ ವೆಬ್ಸೈಟ್ ಆರಾಂಬ್, ಅಖಿಲ ಭಾರತ ಸೇವೆ, ಗ್ರೂಪ್- ಕೇಂದ್ರ ಸೇವೆ ಮತ್ತು ವಿದೇಶಿ ಸೇವೆಯ ಎಲ್ಲ ಪ್ರೊಬೆಷನರ್ಗಳನ್ನು ನಾಗರಿಕ ಸೇವಾ ನೌಕರರ ವೃತ್ತಿ ಜೀವನದ ಆರಂಭಕ್ಕೆ ಮುನ್ನ ಒಂದು ಸಾಮಾನ್ಯ ಪ್ರತಿಷ್ಠಾನ ಕೋರ್ಸ್ಗಾಗಿ (ಸಿಎಫ್ಸಿ) ಒಟ್ಟಿಗೆ ಸೇರಿಸುವ ಒಂದು ಉಪಕ್ರಮವಾಗಿದೆ.

ಆರಂಭ್ ಕೇವಲ ಪ್ರಾರಂಭವಲ್ಲ, ಇದು ಸಂಕೇತ ಮತ್ತು ಹೊಸ ಸಂಪ್ರದಾಯವೂ ಆಗಿದೆ ಎಂದು ಅವರು ತಮ್ಮ ಸರ್ಕಾರ ಪ್ರಾರಂಭಿಸಿದ ಮತ್ತೊಂದು ಅಭಿಯಾನದ ಕುರಿತು ಮಾತನಾಡುತ್ತಾ ಹೇಳಿದರು.

"ಸರ್ಕಾರವು ಕೆಲವು ದಿನಗಳ ಹಿಂದೆ ಮಿಷನ್ ಕರ್ಮಯೋಗಿ ಎಂಬ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಿದೆ. ಮಿಷನ್ ಕರ್ಮಯೋಗಿ ಸಾಮರ್ಥ್ಯವನ್ನು ಹೆಚ್ಚಿಸುವ ದಿಕ್ಕಿನಲ್ಲಿ ರೀತಿಯ ಹೊಸ ಪ್ರಯೋಗವಾಗಿದೆ ಎಂದು ಅವರು ನುಡಿದರು.

ಗುಜರಾತಿನ ಕೇವಡಿಯಾದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ಇದಕ್ಕೆ ಮುನ್ನ ರಾಷ್ಟ್ರೀಯ ಏಕತಾ ದಿನ ಅಥವಾ ರಾಷ್ಟ್ರೀಯ ಏಕತಾ ದಿವಾಸ್ ಮೆರವಣಿಗೆಗೆ ಸಾಕ್ಷಿಯಾದರು. ರಾಷ್ಟ್ರೀಯ ಏಕತಾ ಪ್ರತಿಜ್ಞೆಯನ್ನು ಪ್ರಧಾನಿ ಬೋಧಿಸಿದರು.

ಮಾರ್ಚ್ ತಿಂಗಳಲ್ಲಿ ಕೊರೋನಾವೈರಸ್ ನಿಗ್ರಹಕ್ಕಾಗಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಜಾರಿಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಎರಡು ದಿನಗಳ ಪ್ರವಾಸವನ್ನು ಪ್ರಧಾನಿ ಹಮ್ಮಿಕೊಂಡಿದ್ದರು.

Advertisement